ಆಧುನಿಕ ಯುಗದಲ್ಲಿ ನಶೆಯಿಂದ ಯುವಕ - ಯುವತಿಯರಲ್ಲಿನ ಸಾಮರ್ಥ್ಯ ಕುಂಠಿತವಾಗುತ್ತಿದೆ. ಜೀವನದ ಒತ್ತಡ ನಿರ್ವಹಣೆಯ ವಿಧಾನ ತಿಳಿಯದೆ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆ ಯುವ ಪೀಳಿಗೆಯ ಜೀವನ ಮೌಲ್ಯವನ್ನು ಕುಗ್ಗಿಸುತ್ತದೆ ಎಂದು ಖ್ಯಾತ ಮನೋಚಿಕಿತ್ಸಕ ಡಾ. ಸಚಿನ್ ಪರಬ್ ಹೇಳಿದರು.
ಅವರು ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯ ಮತ್ತು ಸಾಂತ್ವನ ಮಹಿಳಾ ವೇದಿಕೆ ಸಹಯೋಗದಲ್ಲಿ ನಡೆದ,'ನಶಾ ಮುಕ್ತ ಭಾರತ ಅಭಿಯಾನ ' ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.
ಕೇವಲ ಮಾದಕ ವಸ್ತುಗಳಷ್ಟೇ ದುಶ್ಚಟಗಳಾಗಿಲ್ಲ. ಪ್ರಸ್ತುತ ಕಾಲದಲ್ಲಿ ಮೊಬೈಲ್ಗಳ ಬಳಕೆ ಯುವಕರಲ್ಲಿ ಹೆಚ್ಚುತ್ತಿರುವುದರಿಂದ ಅದೊಂದು ಗೀಳಾಗಿ ಪರಿಣಮಿಸಿದೆ. ಅತಿಯಾದ ಮೊಬೈಲ್ ಬಳಕೆಯಿಂದ ನಿದ್ರಾಹೀನತೆ, ಖಿನ್ನತೆ, ವಿದ್ಯಾಭ್ಯಾಸದ ಕಡೆಗಿನ ನಿರ್ಲಕ್ಷ್ಯ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಕುಂಠಿಸುತ್ತಿದೆ. ವೈದ್ಯಕೀಯ ಸಂಶೋಧನೆಯ ಪ್ರಕಾರ ಮೊಬೈಲ್ ಬಳಕೆಯಿಂದ ಅನೇಕ ಅಪಾಯಕಾರಿ ಸಂಗತಿಗಳು ಹೊರಬಂದಿದ್ದು, ಇದರಿಂದ ಮೆದಳು ಸೇರಿದಂತೆ ಅನೇಕ ಅಂಗಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತಿದೆ. ಮಲೇರಿಯಾ, ಟಿಬಿ, ಸ್ಟ್ರೋಕ್ ಇತರೆ ಕಾಯಿಲೆಗಳಂದಾಗುತ್ತಿರುವ ಪ್ರಾಣ ಹಾನಿಗಿಂತ ತಂಬಾಕು ಸೇವನೆಯಿಂದ ಆಗುತ್ತಿರುವ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ದಿನವೊಂದಕ್ಕೆ ತಂಬಾಕು ಸೇವನೆಯಿಂದ 3700 ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಮಾದಕ ವಸ್ತುಗಳ ಬಗ್ಗೆ ಜಾಗ್ರತಿ ಮೂಡಿಸಿದರು.
ಈ ಸಂದರ್ಭದಲ್ಲಿ ಈಶ್ವರೀ ವಿಶ್ವವಿದ್ಯಾಲಯ ಶಿರಸಿ ಕೇಂದ್ರದ ವೀಣಾ ಜಿ, ಸಾಂತ್ವನ ವೇದಿಕೆಯ ಅಧ್ಯಕ್ಷೆ ಜ್ಯೋತಿ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಚಾರ್ಯ ಡಾ.ಟಿ.ಎಸ್ ಹಳೆಮನೆ ಪ್ರಸ್ತಾವಿಸಿ, ಸ್ವಾಗತಿಸಿದರು. ಸಂಗೀತ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಜಿ. ಭಟ್ ನಿರೂಪಿಸಿ ವಂದಿಸಿದರು.
ದೀಕ್ಷಿತಾ ನಾಯ್ಕ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ