- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಗುರುವಾರ, ನವೆಂಬರ್ 30, 2023

ಹೊಸ ವರ್ಷ ಹೊಸ ಹರ್ಷ ತರಲೆಂದು ಬಯಸುತ್ತೇವೆ . ಕ್ಯಾಲೆಂಡರಿನ ಮೊದಲ ತಿಂಗಳಿನಿಂದ ಹಿಡಿದು ಕೊನೆಯ ತಿಂಗಳಿನ ಕೊನೆಯ ದಿನದವರೆಗೂ ಅನುದಿನವೂ ಹೊಸತನ್ನು, ಹೊಸತನವನ್ನು ಕಂಡುಕೊಳ್ಳಲು ಹೋಗಿ ತಿಂಗಳ ಮೇಲೊಂದು ವರ್ಷವನ್ನು ಚಿಂತೆಯಲ್ಲೇ ಕಳೆಯುತ್ತೇವೆ. ಪ್ರತಿಯೊಂದು ವರ್ಷ ಕಳೆದುಹೋದಾಗಲೂ, ‘ನಾವೇನಾದರೂ ಸಾಧಿಸಬಹುದಿತ್ತು, ಇನ್ನೂ ಉತ್ತಮವಾಗಿ ಜೀವನ ರೂಪಿಸಿಕೊಳ್ಳಬಹುದಿತ್ತು, ಇತರರಿಗೆ ನಾವು ಚುಚ್ಚಿ ಮಾತನಾಡಬಾರದಿತ್ತು, ಆದದ್ದೆಲ್ಲವೂ ಕೈ ಮೀರಿ ನಡೆದುಹೋಯಿತು’ ಎಂದು ಮರುಗುತ್ತೇವೆ. ಹರಿವ ತೊರೆ ಬಂಡೆಗಪ್ಪಳಿಸಿ ಧುಮುಕಿದರೆ ಜಲಪಾತದ ಪಾತ್ರ ಪಡೆಯುವಂತೆ, ಅನುದಿನವೂ ನಾವೆಲ್ಲ ಸಮಯದ ಬೊಂಬೆಗಳಾಗಿ ನಮ್ಮ ಪಾತ್ರ ಬದಲಾಯಿಸುತ್ತೇವೆ. ದಿನದಾದಲೆ ಯಿಂದ ಹಿಡಿದು ಅಂತ್ಯದವರೆಗೆ ಜೀವನದ ಸಂತೋಷಕ್ಕಾಗಿ ಹಪಹಪಿಸುತ್ತೇವೆ.ನಮ್ಮ ದಿನನಿತ್ಯದ ಬಯಕೆಗಳ ಪಟ್ಟಿಯಲ್ಲಿ ಆಯುಷ್ಯ, ಆರೋಗ್ಯ, ಸಂತೋಷ ಸಾಮಾನ್ಯವಾಗಿರುತ್ತದೆ. ಆಯುಷ್ಯ ಸೂತ್ರಧಾರನ ಕೈಯಲ್ಲಿರುವುದರಿಂದ ದಿನದ 20 ಶೇಕಡಾ ಸಮಯವನ್ನು ಪರಮಾತ್ಮನಿಗೆ ಮೀಸಲಿಟ್ಟಿದ್ದೇವೆ. ಆರೋಗ್ಯದ ಕಾಳಜಿ ನಮಗಿರುವುದರಿಂದ ದಿನದ ಸಂಭಾವಿತ ಶೇ.30 ರಷ್ಟು ಸಮಯ ಪೋಷಕಾಂಶಯುಕ್ತ ಆಹಾರದ ಆಯ್ಕೆ, ತಯಾರಿ, ಸೇವನೆಗೆ ಮೀಸಲಿಟ್ಟಿದ್ದೇವೆ. ಇನ್ನುಳಿದ ಶೇಕಡಾ 50 ರಷ್ಟು ಸಮಯವನ್ನು ನೆಮ್ಮದಿಹಾಗೂಸಂತೋಷದ ಹುಡುಕಾಟಲ್ಲೇ ಕಳೆಯುತ್ತೇವೆ!ಪ್ರತಿದಿನವೂ ನಮ್ಮ ಬಾಳಿಗೆ ಹೊಸ ದಿನವಾಗಿರಲೆಂದು ಬಯಸುವ ನಾವು, ಅದ್ಯಾವುದೋ ಪುಟ್ಟ ಕಾರಣಕ್ಕೆ ಬೇಸರಗೊಂಡು ನಿರಾಶಭಾವದಿಂದ ದಿನದೂಡುತ್ತೇವೆ. ಇನ್ನೊಬ್ಬರ ಸಂತೋಷ ಕಂಡು ವ್ಯಥೆ ಪಡುವುದಕ್ಕಿಂತ, ಖುಷಿಗಾಗಿ ಹುಡುಕಾಟ ನಡೆಸುವುದಕ್ಕಿಂತ , ಮುಂಜಾನೆ ಕಣ್ಣರೆಪ್ಪೆ ತೆರೆದೊಡನೆ, "ಅಬ್ಬಾ...ಇವತ್ತೂ ಬದುಕಿದ್ದೇನೆ ಎನಬಾರದೇ…! ಸಂತೋಷಪಡಲು ಇದಕ್ಕಿಂದ ಹೆಚ್ಚಿನ ವಿಷಯ ಬೇರೇನಿದೆ? ನಮ್ಮ ಬುದ್ಧಿ ಚಿತ್ತಕ್ಕೆ ಪ್ರೇರೇಪಿಸಿತೆಂದರೆ ದಿನವೆಲ್ಲಾ ಅನಂದಮಯವಾಗಿ ಕಳೆಯಲು ಬೇರೇನು ಬೇಕಿದೆ. ಮನುಷ್ಯ ಜೀವನದ ಬಹುಪಾಲು ಭಾಗ ಸಂತೋಷವನ್ನೇ ಅರಸುವಾಗ ಅದೆಷ್ಟೇ ನೋವಿದ್ದರೂ ಮುಖದಲ್ಲಿ ನಗು ತರದಿದ್ದರೂ ಮನದಲ್ಲಿ ನಗುವಿನ ಛಾಯೆ ತಂದುಕೊಳ್ಳುತ್ತಾನೆ. ಕಾರಣ ಪ್ರತಿಯೊಬ್ಬನೇ ಸಂತೋಷವನ್ನೇ ಬಯಸುತ್ತಾನೆ. ಹೊಸ ವರುಷ ಬಂತೆಂದರೆ ನಾವು ಯಾವ ರೀತಿ ಸಂಭ್ರಮಿಸಿ, ಸಿಹಿಹಂಚಿ, ಪರರ ಜೀವನಕ್ಕೆ ಶುಭ ಹಾರೈಸುತ್ತೇವೋ ಅದೇ ರೀತಿ ನಾವೂ ಜೀವನದ ಪ್ರತಿ ಕ್ಷಣವನ್ನೂ ಅನುಭವಿಸಿದರೆ ಪ್ರತಿದಿನವೂ ಹೊಸ ವರುಷವಾಗಬಹುದು.ಹೊಸ ವರುಷದ ಮೊದಲ ದಿನವನ್ನು ಒಂದಷ್ಟು ಕೊರಗು, ಮತ್ತೊಂದಿಷ್ಟು ಪ್ರತಿಜ್ಞೆಗಳೊಂದಿಗೆ ಆಚರಿಸುತ್ತೇವೆ. ಇನ್ನುಳಿದ ದಿನಗಳಲ್ಲಿ ಮತ್ತದೇ ಸಂತೋಷದ ಹುಡುಕಾಟ, ಜಂಜಾಟ. ಹೊಸ ವರುಷದ ಮೊದಲ ದಿನ ಅತಿಹೆಚ್ಚು ಸಂತೋಷದಿಂದ ಇರುವವರು ಬದಲಾವಣೆಗೆ ಹೊಸವರುಷವನ್ನೇ ಬಯಸುತ್ತಾರೆ.ನಮ್ಮ ಜೀವನದ ಅಸಂತೋಷಕ್ಕೆ ನಾವು ನಮ್ಮ ದಿನವನ್ನೆಲ್ಲ ನಕ್ಷತ್ರವನ್ನು ಎಣಿಸಿ ಭವಿಷ್ಯ ರೂಪಿಸುವುದರಲ್ಲಿ ಮಗ್ನರಾಗಿರುವುದೇ ನೈಜ ಕಾರಣ’ ಎಂದು ʼಸಿಂಹವಾಣಿʼಯಲ್ಲಿ ತಿಳಿಸುತ್ತಾರೆ. ಜ್ಞಾನಶಿರೋಮಣಿ ಬುದ್ಧರು ʼಆಸೆಯೇ ದುಃಖಕ್ಕೆ ಮೂಲ ಕಾರಣʼ ಎನ್ನುತ್ತಾರೆ. ಜಗತ್ತಿನಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಅಚ್ಚೊತ್ತಿರುವ ಈ ಸಾಧಕರ ಮಾತುಗಳು ಈಗ ಪ್ರಸ್ತುತ ಅನಿಸುತ್ತವೆ. ಇವರು ದಿನ, ವರುಷಗಳನ್ನು ಎಣಿಸದೆ ತಾವು ಮಾಡುವ ಪ್ರತಿ ಕೆಲಸವನ್ನೂ ಪ್ರೀತಿಯಿಂದ ಮಾಡಿದವರು. ಪ್ರತಿಕ್ಷಣವನ್ನು ಹೊಸಚಿಂತನೆಗಳೊಂದಿಗೆ ಕಳೆದವರು. ಪ್ರತಿದಿನವನ್ನೂ ಸಾರ್ಥಕತೆಯೆಡೆಗೆ ಒಯ್ದು ಸಂಭ್ರಮಿಸಿದವರು. ಇವರೆಲ್ಲಾ ಸುಖದ ಕಾರಣಗಳನ್ನು ತಮ್ಮಲ್ಲೇ ಕಂಡುಕೊಂಡವರೇ ಹೊರತು ಇತರರನ್ನು ನೋಡಿ ಅನುಕರಿಸಿದವರಲ್ಲ. ಹನಿಗೂಡಿ ಹಳ್ಳವಾಗುವಂತೆ ಪ್ರತಿಕ್ಷಣದ ಧನಾತ್ಮಕತೆ ವರ್ಷಪೂರ್ತಿ ಋಣಾತ್ಮಕತೆಯಿಂದ ಮುಕ್ತವಾಗಿಸುತ್ತದೆ. ಪ್ರತಿಕ್ಷಣವೂ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಪ್ರತಿ ಕ್ಷಣವನ್ನೂ ಹೊಸ ವರುಷವಾಗಿ, ಹರುಷದಿಂದ ಕಳೆಯಬಹುದು. ಆದರ್ಶ್. ಎಸ್ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ